ಮಡಿಕೇರಿ ಮೇಲ್ ಮಂಜು

ಕೆಲವು ದಿನಗಳ ಹಿಂದೆ ಗೆಳೆಯರೊಬ್ಬರು ಟ್ವಿಟ್ಟರಿನಲ್ಲಿ ‘ಮಡಿಕೇರಿ ಮೇಲ್ ಮಂಜು’ ಕವನದ ಸಾಹಿತ್ಯ ಬೇಕಿತ್ತು ಎಂದು ಕೇಳಿದಾಗ, ತಕ್ಷಣ ನೆನಪಿಗೆ ಬಂದದ್ದು ಹೋದ ವರ್ಷದ ನನ್ನ ಅನುಭವ. ಕಳೆದ ವರ್ಷ ಏಪ್ರಿಲ್ಲಿನಲ್ಲಿ, ಬೆಂಗಳೂರಿನ ಬಿರುಬಿಸಿಲನ್ನು ತಪ್ಪಿಸಿಕೊಳ್ಳಲೆಂದು ಮಡಿಕೇರಿಗೆ ಹೊರಟರೆ ಅಲ್ಲೂ ಅಷ್ಟೇ ಬಿಸಿಲು. ಆದರೆ ಸಂಜೆಯಾಗುತ್ತಿದ್ದಂತೆ ಶುರುವಾದ ತಂಗಾಳಿ, ಬೆಂಗಳೂರಿಗೂ ಮಡಿಕೇರಿಗೂ ಇರುವ ವ್ಯತ್ಯಾಸ ತೋರಿಸಿತ್ತು. ಸಂಜೆ ಸರಿದು ರಾತ್ರಿಯಾದಂತೆ ಪ್ರಾರಂಭವಾದ ಸಣ್ಣ ಹನಿ, ಬರುಬರುತ್ತಾ ಧಾರಾಕಾರವಾಗಿ ಸುರಿಯತೊಡಗಿತು. ಬೆಳಿಗ್ಗೆ ಎದ್ದು ನಾವಿದ್ದ ರೂಮಿನಿಂದ ಹೊರಬಂದು ನೋಡಿದರೆ ಒಂದು ಹೊಸ ಮಾಯಾಲೋಕ. ಬೆಟ್ಟ, ಗಿಡ-ಮರಗಳನ್ನೂ ತಬ್ಬಿ ಹಿಡಿದಿದ್ದ ಮಂಜು, ಜಿ. ಪಿ. ರಾಜರತ್ನಂರವರ ‘ಮಡಕೇರೀ ಮೇಲ್ ಮಂಜು’ ಕವನವನ್ನು ನೆನಪಿಸಿದವು.

ಪಯಣಿಗ - ಮಡಿಕೇರಿ ಮೇಲ್ ಮಂಜು

ಕವನದ ಪೂರ್ತಿ ಸಾಹಿತ್ಯ ನನ್ನಲ್ಲಿಲ್ಲದ್ದರಿಂದ, ಬೆಂಗಳೂರಿನಲ್ಲಿರುವ ಅಕ್ಕನಿಗೆ ಫೋನಾಯಿಸಿ ಕವನವನ್ನು ಮಿಂಚೆಯಲ್ಲಿ ಪಡೆದು ಇಲ್ಲಿ ಹಾಕಿದ್ದೇನೆ…

ಬೂಮಿನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
        ಮಡಿಕೇರಿಲಿ ಮಂಜು!
ಮಡಗಿದ್ ಅಲ್ಲೇ ಮಡಗಿದ್ದಂಗೆ
ಲಂಗರ್ ಬಿದ್ದಿದ್ ಅಡಗಿದ್ದಂಗೆ
ಸೀತಕ್ ಸಕ್ತಿ ಉಡಗೋದಂಗೆ
        ಅಳ್ಳಾಡಾಲ್ದು ಮಂಜು!

ತಾಯಿ ಮೊಗಿನ್ ಎತ್ಕೊಂಡಂಗೆ
ಒಂದಕ್ಕೊಂದು ಅತ್ಕೊಂಡಂಗೆ
ಮಡಿಕೇರಿನ ಎದೆಗೊತ್ಕೊಂಡಿ
        ಜೂಗೀಡ್ಸ್ತಿತ್ತು ಮಂಜು
ಮಲಗಾಕ್ ಸೊಳ್ಳೆಪರದೆ ಕಟ್ಟಿ
ಒದೆಯಾಕ್ ಒಗದಿದ್ ದುಬಟಿ ಕೊಟ್ಟಿ
ಪಕ್ದಾಗ್ ಗಂದದ್ ದೂಪ ಆಕ್ದಂಗ್
        ಮಡಕೇರೀ ಮೇಲ್ ಮಂಜು!

ಮಂಜಿನ ಮಸಕಿನ್ ಕಾವಲ್ನಲ್ಲಿ
ಒಣಗಿದ್ ಉದ್ದಾನೆ ವುಲ್ನಲ್ಲಿ
ಒಳಗೇ ಏನೋ ಸರದೋದಂಗೆ
        ಅಲಗಾಡ್ತಿತ್ತು ಮಂಜು
ನಡಿಯೋ ದೊಡ್ದೊಡ್ ದೇವಲ್ನಂಗೆ
ಪಟ್ಣದ್ ಸುತ್ತಿನ ಕಾವಲ್ನಂಗೆ
ಅಲ್ಲಲ್ಲೇನೆ ಅಂಗಂಗೇನೆ
        ಗಸ್ತಾಕ್ತಿತ್ತು ಮಂಜು

ಸೂರ್ಯನ್ ಕರೆಯಾಕ್ ಬಂದ ನಿಂತೋರು
ಕೊಡಗಿನ್ ಎಲ್ಲಾ ಪೂವಮ್ನೋರು
ತೆಳ್ನೆ ಬೆಳ್ನೆ ಬಟ್ಟೇನಾಕಿ
        ಬಂದಂಗಿತ್ತು ಮಂಜು!
ಚಿಮ್ತಾನಿದ್ರ್ ಎಳೆಬಿಸಲಿನ್ ಕೆಂಪು
ಮಂಜಿನ ಬಣ್ಣ ಕಣ್ಗೆ ತಂಪು!
ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ
        ಆಲಿನ್ ಸೌಂದ್ರೀ ಮಂಜು!

ಅಗಲೇ ಬರಲಿ ರಾತ್ರೇ ಬರಲಿ
ಬಿಸಲು ನೆಳ್ಳು ಏನೇ ಇರಲಿ
ಕಣ್ಮರೆಯಾಗಾಕ್ ತಾವ್ ಕೊಡಾಲ್ದು
        ಮಡಕೇರೀಗೆ ಮಂಜು!
ತೈಲ ನೀರಿನ್ ಮ್ಯಾಗಿದ್ದಂಗೆ
ಪೂವಮ್ಮ – ನನ್ ತಂಗೀದ್ದಂಗೆ
ಬಿಟ್ಟೂ ಬಿಡದಂಗ್ ಇಡಕೋಂತಿತ್ತು
        ಮಡಕೇರೀಗೆ ಮಂಜು!

ಮಾರ್ಕೋನಹಳ್ಳಿಯ ಶಿಂಷಾ

ಪಯಣಿಗ - ಮಾರ್ಕೋನಹಳ್ಳಿಯ ಶಿಂಷಾ

ನದಿಗಳು, ಅದರಲ್ಲೂ ಕರ್ನಾಟಕದ ನದಿಗಳು ಅಂದಾಕ್ಷಣ ನನಗೆ ಮೊದಲು ನೆನಪಿಗೆ ಬರುವುದು ಶಿಂಷಾ. ಬಹುಶಃ ನಾನು ನೋಡಿದ, ಲೆಕ್ಕವಿಲ್ಲದಷ್ಟು ಬಾರಿ ನೀರಿನಲ್ಲಿ ಆಡಿದ ಮತ್ತು ಮಿಂದ ಮೊದಲ ನದಿಯಾದದ್ದರಿಂದ ಇರಬಹುದು. ಅಥವಾ ಶಾಲೆಯಲ್ಲಿದ್ದಾಗ ಪ್ರತಿ ರಸಪ್ರಶ್ನೆಯಲ್ಲೂ ಕೇಳುತ್ತಿದ್ದ – “ತುಮಕೂರು ಜಿಲ್ಲೆಯಲ್ಲಿ ಹುಟ್ಟುವ ಮೂರು ನದಿಗಳು ಯಾವುವು?” – ಎಂಬ ಪ್ರಶ್ನೆಯಿಂದ ಇದ್ದಿರಬಹುದು. ಕಾವೇರಿಯ ಉಪನದಿಯಾದ ಶಿಂಷಾ, ದೇವರಾಯನದುರ್ಗದ ಬಳಿ ಹುಟ್ಟಿ, ತುರುವೇಕೆರೆ ತಾಲ್ಲೂಕಿಗೆ ನುಗ್ಗಿ ಅಲ್ಲಿಂದ ಕುಣಿಗಲ್ ತಾಲ್ಲೂಕಿನೊಳಗೆ ಹರಿಯುತ್ತದೆ. ಅಲ್ಲಿಯತನಕ ಅಡೆತಡೆಯಿಲ್ಲದೆ ಹರಿಯುವ ನದಿಗೆ ಒಂದು ಕಟ್ಟೆ – ಮಾರ್ಕೋನಹಳ್ಳಿ ಜಲಾಶಯ. ಸೈಫನ್ ಮಾದರಿಯ ವಿಶಿಷ್ಟವಾದ ತಂತ್ರಜ್ಞಾನವಿರುವ ಈ ಜಲಾಶಯ ವಿಶ್ವೇಶ್ವರಯ್ಯರವರ ಹಸ್ತಕೌಶಲ. ಯಡಿಯೂರಿನಿಂದ ಸುಮಾರು ನಾಲ್ಕು ಕಿ.ಮೀ. ದೂರವಿರುವ ಜಲಾಶಯ, ಸುತ್ತಮುತ್ತಲಿನ ರೈತಾಪಿ ಜನರಿಗೆ ಜೀವಜಲ.

ಪಯಣಿಗ - ಮಾರ್ಕೋನಹಳ್ಳಿಯ ಶಿಂಷಾ

ಪಯಣಿಗ - ಮಾರ್ಕೋನಹಳ್ಳಿಯ ಶಿಂಷಾ

ಶಿಂಷಾ ಎಂದೊಡನೆ, ಚಿಕ್ಕವನಾಗಿದ್ದಾಗಿನ ದಿನಗಳು ನೆನಪಿಗೆ ಬರುತ್ತದೆ. ಹುಲಿಯೂರುದುರ್ಗದಲ್ಲಿ ಕಳೆದ ಬಾಲ್ಯದ ದಿನಗಳು – ಹತ್ತಿರದ ಕುಂಭಿ ಬೆಟ್ಟವನ್ನು ಲೆಕ್ಕವಿಲ್ಲದಷ್ಟು ಬಾರಿ ಹತ್ತಿದ್ದು, ದೀಪಾಂಬುಧಿ ಕೆರೆ ಏರಿಯ ಮೇಲಿನ ಕೈತುತ್ತೂಟ, ರಜಾ ದಿನಗಳಲ್ಲಿ ಪ್ರತಿದಿನ ಬೆಳಗ್ಗೆ ಮಂಡಿಗುಡ್ಡೆಗೆ ವಾಕಿಂಗ್, ಪಕ್ಕದ ಊರಿನ ಹಳೆಯೂರಮ್ಮನ ಜಾತ್ರೆ, ಮನೆಯ ಮುಂದಿನ ಬಾಲ್ ಫೀಲ್ಡ್ ನಲ್ಲಿ ಕ್ರಿಕೆಟ್ಟಾಟ, ಜೊತೆಗೆ ಮಾರ್ಕೋನಹಳ್ಳಿ ಅಣೆಕಟ್ಟಿಗೆ ಒಂದು ದಿನದ ಪಿಕ್ನಿಕ್, ಅಲ್ಲಿನ ಉದ್ಯಾನ ಮತ್ತು ಕಾಲುವೆಯಲ್ಲಿ ಮನದಣಿಯೆ ಆಟ. ಇವೆಲ್ಲ ಸುಮಾರು 15-20 ವರ್ಷಗಳ ಹಿಂದಿನ ಕಥೆ.

ಬಹಳ ವರ್ಷಗಳ ನಂತರ ಇದ್ದಕ್ಕಿಂದಂತೆ ಮಾರ್ಕೋನಹಳ್ಳಿ ನೆನಪಿಗೆ ಬಂದು, ಸಮಯ ಸಿಕ್ಕಾಗ ಆ ಕಡೆ ಹೊರಟೆ. ಅದೇ ನೀರವತೆ, ಅಣೆಕಟ್ಟೆಯ ಗೋಡೆಗೆ ಬಂದು ಅಪ್ಪಳಿಸುವ ನೀರಿನಲೆಗಳು. ಉದ್ಯಾನವಿನ್ನೂ ಇದೆ, ಆದರೆ ನೋಡಿಕೊಳ್ಳುವವರಿಲ್ಲದೆ ಬರಡಾಗಿದೆ. ಆಗ ಕೇವಲ ಸುತ್ತಮುತ್ತಲಿನವರಿಗೆ ಪಿಕ್ನಿಕ್ ತಾಣವಾಗಿದ್ದ ಮಾರ್ಕೋನಹಳ್ಳಿ ಈಗ ಕಮರ್ಷಿಯಲ್ ಆಗುತ್ತಿದೆ. ಹಳೆಯ ನೆನಪುಗಳ ಜೊತೆ, ಹೊಸ ನೋಟಗಳನ್ನು ಹೊತ್ತುಕೊಂಡು ಬಂದದ್ದಷ್ಟೇ ಸಮಾಧಾನ.

ಕೈದಾಳದ ಚನ್ನಕೇಶವ

ಪಯಣಿಗ - ಕೈದಾಳದ ಚನ್ನಕೇಶವ

ಕರ್ನಾಟಕದ ಇತಿಹಾಸದಲ್ಲಿ ಸಾಹಿತ್ಯ, ಕಲೆ ಮತ್ತು ಶಿಲ್ಪಕಲೆಗಳಿಗೆ ಹೊಯ್ಸಳರ ಕೊಡುಗೆ ಅಪಾರ. ಸುಮಾರು 300-350 ವರ್ಷಗಳ ಕಾಲ ಕರ್ನಾಟಕ ಮತ್ತು ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ಹೊಯ್ಸಳರು, ಸುಮಾರು ಸಾವಿರಕ್ಕೂ ಹೆಚ್ಚು ಕಟ್ಟಿಸಿದರು. ಬೇಲೂರು, ಹಳೆಬೀಡು, ಸೋಮನಾಥಪುರ, ನುಗ್ಗೇಹಳ್ಳಿ, ಬೆಳವಾಡಿ, ದೊಡ್ಡಗದ್ದವಳ್ಳಿ – ಹೀಗೆ ದೇವಸ್ಥಾನಗಳ ಪಟ್ಟಿ ಕೊನೆಯಿಲ್ಲದ್ದು. ಹೊಯ್ಸಳ ಶಿಲ್ಪಕಲೆ ಎಂದಾಕ್ಷಣ ನೆನಪಿಗೆ ಬರುವುದು ರಾಜಾ ವಿಷ್ಣುವರ್ಧನನ ಪ್ರೋತ್ಸಾಹ ಮತ್ತು ಶಿಲ್ಪಕಲಾಕೌಶಲ್ಯದ ರೂವಾರಿ, ಜಕಣಾಚಾರಿಯ ದಂತಕಥೆ.

ಪಯಣಿಗ - ಕೈದಾಳದ ಚನ್ನಕೇಶವ

ಪಯಣಿಗ - ಕೈದಾಳದ ಚನ್ನಕೇಶವ

ತುಮಕೂರು ಜಿಲ್ಲೆಯಲ್ಲಿನ ಕೈದಾಳ, ಈ ಹೊಯ್ಸಳ ಶೈಲಿಯ ದೇವಸ್ತಾನಗಳ ಪಟ್ಟಿಗೆ ಸೇರುವ ಮತ್ತೊಂದು ಹಳ್ಳಿ. ತುಮಕೂರು-ಕುಣಿಗಲ್ ರಸ್ತೆಯಲ್ಲಿ ಸಿಗುವ ಗೂಳೂರಿನಲ್ಲಿ ಬಲಕ್ಕೆ ತಿರುಗಿ ಒಂದು ಕಿ.ಮೀ. ಚಲಿಸಿದರೆ ಕೈದಾಳ ಸಿಗುತ್ತದೆ. ಹೊಯ್ಸಳ ಶೈಲಿಯ ಶಿಲಾಬಾಲಿಕೆ-ಕೆತ್ತನೆಗಳನ್ನು ಹುಡುಕಿ ಇಲ್ಲಿಗೆ ಬಂದರೆ ನಿರಾಶೆ ಖಂಡಿತ. ಹೊರಗಿನಿಂದ
ಸಾಧಾರಣ ದೇಗುಲದಂತೆ ಕಂಡರೂ, ಗರ್ಭಗುಡಿಯಲ್ಲಿರುವ ಚನ್ನಕೇಶವ ವಿಗ್ರಹದ ಕೆತ್ತನೆ ಕಣ್ಸೆಳೆಯುತ್ತದೆ. ಸುಮಾರು 6 ಅಡಿ ಎತ್ತರವಿರುವ ಕಪ್ಪು ಶಿಲೆಯ ಚನ್ನಕೇಶವ ಸ್ವಾಮಿ ಎಲ್ಲ ದೇವಸ್ತಾನಗಳಂತೆ ಪೂರ್ವಾಭಿಮುಖವಾಗಿರುವ ಬದಲು, ಇಲ್ಲಿ ಪಶ್ಚಿಮಾಭಿಮುಖವಾಗಿದೆ. ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರದ ಕೆತ್ತನೆ ಶಿಲ್ಪಿಯ ಕರಕುಶಲತೆಯನ್ನು ಎತ್ತಿ ತೋರುತ್ತದೆ.

ಪಯಣಿಗ - ಕೈದಾಳದ ಚನ್ನಕೇಶವ

ಪುರಾಣ, ದಂತಕಥೆಗಳ ಪ್ರಕಾರ ಕೈದಾಳ (ಮೊದಲಿಗೆ ಕ್ರೀಡಿಕಾಪುರ) ಜಕಣಾಚಾರಿ ಹುಟ್ಟಿದ ಸ್ಥಳ. ತಾನು ಕೆತ್ತಿದ ಬೇಲೂರಿನ ಚನ್ನಕೇಶವ (ಕಪ್ಪೆ ಚನ್ನಿಗರಾಯ) ವಿಗ್ರಹದಲ್ಲಿನ ದೋಷಕ್ಕಾಗಿ ತನ್ನ ಕೈಯನ್ನು ಬಲಿ ಕೊಟ್ಟ ಜಕಣಾಚಾರಿ, ದೈವೇಚ್ಛೆಯಂತೆ ತನ್ನ ಹುಟ್ತಿದೂರಿನಲ್ಲಿ ಮತ್ತೊಂದು ದೇವಸ್ಥಾನ ನಿರ್ಮಿಸಿ ಕೈ ಮರಳಿ ಪಡೆಯುತ್ತಾನೆ. ಕೈ ಮರಳಿ ಬಂದಿದ್ದರಿಂದ ಕ್ರೀಡಿಕಾಪುರ ಮುಂದೆ ಕೈದಾಳವಾಗಿ ಮಾರ್ಪಟ್ಟಿತು ಎನ್ನಲಾಗುತ್ತದೆ. ಜಕಣಾಚಾರಿಯ ಜೀವನದ ಕೊನೆಯ ದಿನಗಳಲ್ಲಿ ಕೈದಾಳದ ದೇವಸ್ತಾನವನ್ನು ಕಟ್ಟಲಾಯಿತೆಂದೂ, ಅದರಿಂದಾಗಿ ದೇವಸ್ಥಾನದ ಹೊರಗಿನ ಕೆತ್ತನೆ ನಡೆಯಲಿಲ್ಲವೆಂದು ಪ್ರತೀತಿ. ಒಂದು ದಂತಕಥೆ ಈ ರೀತಿಯದ್ದಾರೆ, ಕೆಲವರ ತರ್ಕದ ಪ್ರಕಾರ, ಜಕಣಾಚಾರಿ ಎನ್ನುವ ಶಿಲ್ಪಿ ಬದುಕಿರಲೇ ಇಲ್ಲ ಎನ್ನುವುದು.

ವಿರುಪಾಪುರ

ವಿರುಪಾಪುರ - virupapura

ವಿರುಪಾಪುರ, ನಮ್ಮ ಹಳ್ಳಿಯಿಂದ ಈಶಾನ್ಯಕ್ಕೆ ಸುಮಾರು ಒಂದು ಮೈಲಿ ದೂರದಲ್ಲಿರೋ ಒಂದು ಸಣ್ಣ ಹಳ್ಳಿ. ನಮ್ಮೂರೇ ಚಿಕ್ಕದು ಅಂದರೆ ವಿರುಪಾಪುರ ಮತ್ತೂ ಸಣ್ಣ ಊರು. ಹಳ್ಳಿಯ ಉತ್ತರಕ್ಕೆ, ರಸ್ತೆಯ ಮಗ್ಗುಲಿಗೇ ಒಂದು ಸಣ್ಣ ಗುಡ್ಡ. ದಾಪುಗಾಲು ಹಾಕುತ್ತಾ ಹತ್ತಿದರೆ 15-20 ನಿಮಿಷಗಳಲ್ಲೇ ತುದಿಯಲ್ಲಿರುವ ಮಂಟಪ ತಲುಪುವಷ್ಟು ಸಣ್ಣದು. ಗುಡ್ಡ ಚಿಕ್ಕದಾದರೂ ನನ್ನಲ್ಲಿ ಊರೂರು ಸುತ್ತುವ, ಬೆಟ್ಟ-ಗುಡ್ಡಗಳಲ್ಲಿ ಅಲೆಯುವ ಗೀಳು ಹುಟ್ಟುಸಿದ ಜಾಗ. ಚಿಕ್ಕವನಿದ್ದಾಗ ಬೇರೆಯವರು ಹೇಳಿದ ಸೀಳುನಾಯಿಗಳ ಕಥೆಯನ್ನು ಕಣ್ಣಾರಳಿಸಿ ಕೇಳಿ, ಮೂರ್ನಾಲ್ಕು ವರ್ಷಗಳ ನಂತರ ಅದೇ ಬೆಟ್ಟದಲ್ಲಿ ಕಲ್ಲು-ಬಂಡೆಗಳ ಸಂದಿಯಲ್ಲಿ, ಪೊದೆಗಳ ಹಿಂಬದಿಯಲ್ಲಿ ಹುಡುಕಿದ್ದೂ ಉಂಟು. ಸೀಳುನಾಯಿಗಳ ಜೊತೆಗೆ, ಬೆಟ್ಟದ ಮೇಲೆ ಬೆಳೆದಿದ್ದ ಲೆಕ್ಕವಿಲ್ಲದಷ್ಟು ಸೀತಾಫಲ ಗಿಡಗಳಲ್ಲಿ ಹಣ್ಣುಗಳನ್ನು ಹುಡುಕಿದೆಷ್ಟೋ. ಬೇಸಿಗೆ ರಜೆಗಳಲ್ಲಿ ಬೆಟ್ಟ ಹತ್ತಿಳಿದ, ಒಂಟಿ ಹಾಳು ಮಂಟಪದಲ್ಲಿ ಒಬ್ಬನೇ ಕುಳಿತು ಕಳೆದ ಸಮಯವೆಷ್ಟೋ.

ವಿರುಪಾಪುರ - virupapura

ಶಿವಗಂಗೆ - shivagange

ವಿರುಪಾಪುರ ಗುಡ್ಡದ ದಕ್ಷಿಣದ ಎತ್ತರದಲ್ಲಿ ಒಂಟಿ ಹಾಳು ಮಂಟಪವಿದ್ದರೆ, ಉತ್ತರ ತುದಿಯಲ್ಲಿ ಸ್ವಲ್ಪ ತಗ್ಗಿನಲ್ಲಿ ರಾಮ ಕಟ್ಟಿಸಿದನೆಂದು ಹೇಳುವ ಶಿವನ (ಸಿದ್ದರಾಮೇಶ್ವರ) ಗುಡಿಯಿದೆ. ರಾಮಾಯಣ ಕಾಲದಲ್ಲಿ, ರಾಮ-ಲಕ್ಷ್ಮಣ-ಹನುಮಂತರು ಸೀತೆಯನ್ನು ಹುಡುಕುತ್ತಾ ಬಂದಾಗ ಈ ಗುಡಿಯನ್ನು ಕಟ್ಟಲಾಯಿತೆಂದು ಪ್ರತೀತಿ. ಸೀತೆಯನ್ನು ಹುಡುಕುತ್ತ ಹನುಮಂತ ಒಂದೇ ನೆಗೆತಕ್ಕೆ ಈ ಗುಡ್ಡದಿಂದ ಶಿವಗಂಗೆ ಗುಡ್ಡಕ್ಕೆ ಹಾರಿದನೆಂದು ಕೂಡ ಕೇಳಿದ್ದೇನೆ. ಗುಡಿಯಿಂದಾಗಿ ಊರಿಗೆ ’ವಿರೂಪಾಕ್ಷಪುರ’ ಎಂದು ಹೆಸರು ಬಂತೆಂದೂ, ನಂತರ ಜನರ ಬಾಯಲ್ಲಿ ’ವಿರುಪಾಪುರ’ ಆಯಿತೆಂದು ಒಂದು ಕಥೆ.

ಈಗಲೂ ಹಳ್ಳಿಗೆ ಹೋದಾಗ ವಿರುಪಾಪುರದ ಗುಡ್ಡ, ಒಂಟಿ ಮಂಟಪದ ಕಡೆ ಮನಸ್ಸೋಡುತ್ತದೆ. ಈಗಂತೂ ಕಲ್ಲು-ಗಣಿಗಾರಿಕೆಯಿಂದಾಗಿ ಗುಡ್ಡದ ಕಾಲು ಭಾಗ ಆಗಲೇ ಮರೆಯಾಗಿದೆ. ನನ್ನ ಸುತ್ತಾಟಗಳಿಗೆ ಇಂಬು ಕೊಟ್ಟ ವಿರುಪಾಪುರದ ಗುಡ್ಡ, ಹಾಳು ಮಂಟಪ – ಕಣ್ಮುಂದೆಯೇ ಇಲ್ಲದಂತಾಗುವಾಗ, ಸ್ವಂತದ್ದೇನೋ ಕಳೆದುಕೊಳ್ಳುತಿದ್ದೇನೆಯೋ ಅನ್ನಿಸುತ್ತಿದೆ. ಕಲ್ಲು ಕರಗುವ ಮುನ್ನ, ನೋಡಬೇಕೆಂದಿದ್ದರೆ ಹೇಳಿ – ಗುಡ್ಡ ಹತ್ತಿಸಿ, ಸೀಳು ನಾಯಿಯ ಗುಹೆ ತೋರಿಸಿ ಬರುತ್ತೇನೆ :)